ಆಗಾಖಾನ್
ಷಿಯ ಮುಸ್ಲಿಮರಲ್ಲಿ ಇಸ್ಮೈಲಿ ಪಂಥದವರ ಧರ್ಮಗುರು. ಈ ಗುರುತ್ವ ವಂಶಪಾರಂಪರ್ಯವಾಗಿ ಬಂದಿದೆ. ಪೈಗಂಬರ್ ಮಹಮ್ಮದನ ಅಳಿಯನಾದ ಅಲಿ ಮತ್ತು ಅವನ ಹೆಂಡತಿ ಫಾತಿಮರ ಸಂತತಿಯವನಾದ ಹಸನ್ ಅಲಿ ಷಾಗೆ (1800-1851) ಪರ್ಷಿಯಾದ ದೊರೆ ಕೊಟ್ಟ ಬಿರುದು ಆಗಾಖಾನ್ ಎಂಬುದು. ಹಸನ್ ಅಲಿಗೂಪರ್ಷಿಯದ ದೊರೆಗೂ ವೈಮನಸ್ಯ ಬೆಳೆದು ಆತ ಭಾರತಕ್ಕೆ ಬಂದು ನೆಲೆಸಬೇಕಾಯಿತು. ಮೊದಲು ಆಫ್ಘನ್ ಯುದ್ಧದಲ್ಲಿಯೂ (1839-1842) ಮುಂದೆ ಸಿಂಧೂ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವುದರಲ್ಲಿ ಆತ ಬ್ರಿಟಿಷರಿಗೆ ನೆರವು ನೀಡಿದ್ದರಿಂದ ಅವರು ಅವನಿಗೆ ಹಿಸ್ ಹೈನೆಸ್ ಎಂಬ ಬಿರುದನ್ನೂ ಜೀವನಾಂಶವನ್ನೂ ಕೊಟ್ಟರು.

	ಆತನ ಮೊಮ್ಮಗ ಮೂರನೆಯ ಆಗಾಖಾನ್ (1878-1957) ಅಂತರಾಷ್ಟ್ರೀಯ ಖ್ಯಾತಿ ಪಡೆದ. ಅವನ ಹೆಸರು ಸುಲ್ತಾನ್ ಸರ್ ಮಹಮ್ಮದ್ ಷಾ. ಬಾಲ್ಯದಿಂದಲೂ ಧಾರ್ಮಿಕ ಶಿಕ್ಷಣವನ್ನಲ್ಲದೆ ಪಾಶ್ಚಾತ್ಯ ಶಿಕ್ಷಣವನ್ನು ಪಡೆದು ತನ್ನ ಅಸಾಧಾರಣ ವ್ಯಕ್ತಿತ್ವದಿಂದ ಇಸ್ಮೈಲಿ ಪಂಥದವರಿಗೆ ಮಾತ್ರ ಅಲ್ಲ, ಭಾರತದ ಇಡಿ ಮುಸ್ಲಿಮರ ಮುಖಂಡನಾಗಿ ನಿಂತು ಅವರ ರಾಜಕೀಯ ಹಕ್ಕುಬಾಧ್ಯತೆಗಳಿಗಾಗಿ ಶ್ರಮಿಸಿದ. ಬ್ರಿಟಿಷ್ ಆಡಳಿತಕ್ಕೆ ಬೆಂಬಲಕೊಡಲು ಅಖಿಲ ಭಾರತ ಮುಸ್ಲಿಮ್ ಸಂಘವನ್ನು ಸ್ಥಾಪಿಸಿದ (1906). 1930ರ ದಶಕದಲ್ಲಿ ಲೀಗ್ ಆಫ್ ನೇಷನ್ಸ್‍ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ. 1937ರಲ್ಲಿ ಲೀಗಿನ ಅಧ್ಯಕ್ಷನಾದ. 1930-32ರ ಚಕ್ರ ಗೋಷ್ಠಿಗಳಲ್ಲಿ ಪರಿಣಾಮಕಾರಿಯಾದ ಪಾತ್ರವಹಿಸಿದ. ನಾನಾ ದೇಶಗಳಲ್ಲಿ ನೆಲೆಸಿದ್ದ ಅವನ ಇಸ್ಮೈಲಿ ಅನುಯಾಯಿಗಳ ಐಹಿಕ ಪುರೋಭಿವೃದ್ಧಿಗಾಗಿ ದುಡಿದ. ಶುದ್ಧತಳಿ ಕುದುರೆಗಳನ್ನು ಸಾಕುವುದರಲ್ಲಿ ಈತ ನಿಷ್ಣಾತ. ಐದು ಬಾರಿ ಈತನ ಕುದುರೆಗಳು ಡರ್ಬಿ ಪಂದ್ಯದಲ್ಲಿ ಗೆದ್ದಿವೆ. 1936ರಲ್ಲಿ ಧರ್ಮಗುರು ಕಾರ್ಯದಿಂದ ನಿವೃತ್ತನಾಗಿ ಮೊಮ್ಮಗನಾದ ಪ್ರಿನ್ಸ್ ಕರೀಂ ನನ್ನು ಗುರುವನ್ನಾಗಿ (ನಾಲ್ಕನೆಯ ಆಗಾಖಾನ್) ನೇಮಿಸಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ